ಇತಿಹಾಸ
ಭಾರತದ ಪುರಾತನ ಭಾಷೆಗಳಲ್ಲೊಂದು ಕೊಂಕಣಿ. ಉತ್ತರ ಭಾರತದಲ್ಲಿ ಸರಸ್ವತಿ ನದಿಯ ತೀರದಲ್ಲಿ ಹುಟ್ಟಿದ ಈ ಭಾಷೆಯು ಪ್ರಾಕೃತ ಭಾಷೆಯಿಂದ ಬೆಳೆದು ಬಂದ ಭಾಷೆಗಳಲ್ಲಿ ಒಂದು. ಕೊಂಕಣಿಯು ಅರ್ಯ ಭಾಷೆಗಳ ಸಮುದಾಯಕ್ಕೆ ಸೇರಿದ್ದಾಗಿದೆ.

ಭಾಷೆಗಳ ಬೆಳವಣಿಗೆಯಲ್ಲಿ ರಾಜ್ರಾಶಯ ಅಗತ್ಯವಿದ್ದರೂ, ಕೊಂಕಣಿಯ  ಇತಿಹಾಸದುದ್ದಕ್ಕೂ ತನ್ನದೇ ಆದ ಯಾವ ರಾಜನೂ ಇರದ ಕಾರಣ ರಾಜಾಶ್ರಯವಿಲ್ಲದೆ ಬೆಳೆದು ಉಳಿಯುವ ಪರಿಸ್ಥಿತಿ ಕೊಂಕಣಿದ್ದಾಯಿತು.  ಅದಲ್ಲದೆ ಕೊಂಕಣಿಗರು ಭಾರತದ  ಕರಾವಳಿ ಪ್ರದೇಶದ  ನಾಲ್ಕು ರಾಜ್ಯಗಳಲ್ಲಿ ಹರಡಿಕೊಂಡಿದ್ದುದರಿಂದ ಕೊಂಕಣಿ ಸಾಹಿತ್ಯದ ಅಭಿವೃದ್ಧಿ ಕೂಡ ಕುಂಠಿತವಾಯಿತು. ಕೊಂಕಣಿಗೆ ತನ್ನದೆ ಲಿಪಿ ಇಲ್ಲದ ಕಾರಣ ಕೊಂಕಣಿಯನ್ನು ಇಂದು ೫ ಲಿಪಿಗಳಲ್ಲಿ ಅಂದರೆ ಕನ್ನಡ, ದೇವನಾಗರಿ, ರೋಮಿ,ಮಲಯಾಳಂ ಮತ್ತು ಅರಬ್ಬಿ ಲಿಪಿಗಳಲ್ಲಿ ಕೊಂಕಣಿಯನ್ನು ಬರೆಯುತ್ತಾರೆ.ಭಾರತದಲ್ಲಿ ಸುಮಾರು ೫೦ ಲಕ್ಷ ಕೊಂಕಣಿಗರು ವಾಸಿಸುತ್ತಾರೆ. ಇದರಲ್ಲಿ ಬಹುಸಂಖ್ಯಾತರು(೫೦%ದಷ್ಟು) ಕೊಂಕಣಿಗರು ಕರ್ನಾಟಕದಲ್ಲಿದ್ದಾರೆ.  ರಾಜ್ಯ ಭಾಷೆ ಎಂದು ಮಾನ್ಯತೆ ಪಡೆದ ಗೋವಾದಲ್ಲಿ ಕರ್ನಾಟಕದಲ್ಲಿ ವಾಸಿಸುವ ಕೊಂಕಣಿಗರ ಸಂಖ್ಯೆಯ ಅರ್ಧ ಪಾಲಿಗಿಂತ ಕಡಿಮೆ.

ಕೊಂಕಣಿ ಭಾಷೆ ಸಾಹಿತ್ಯ ಸಂಸ್ಕೃತಿ, ಕಲೆಗಳ ಜಾನಪದ ಕಲೆಗಳ ಬೆಳವಣಿಗಾಗಿ ಕರ್ನಾಟಕ ಸರ್ಕಾರವು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯನ್ನು  ಸರಕಾರದ ಅದೇಶ ಸಂಖ್ಯೆ:ಸಂಕಇ ೧೯ ಕರಅ ೯೪ ದಿನಾಂಕ ೨೧ನೇ ಏಪ್ರಿಲ್ ೧೯೯೪ ರಂದು ಸ್ಥಾಪನೆಮಾಡಲಾಗಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಕೇಂದ್ರ  ಕಛೇರಿಯು ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

೧೯೯೪ ರಿಂದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ವಾರ್ಷಿಕವಾಗಿ ಕೊಂಕಣಿ ಭಾಷೆ, ಸಾಹಿತ್ಯ ಕಲೆಗಳ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರವು, ಅನುದಾನ ನೀಡಿ ಕೊಂಕಣಿ ಭಾಷೆಯ ಬೆಳವಣಿಗೆಗಾಗಿ ಪ್ರೋತ್ಸಾಹ ನೀಡುತ್ತಿದೆ. ಪ್ರಾರಂಭದಲ್ಲಿ ಸರ್ಕಾರವು  ಅಕಾಡೆಮಿಗೆ ೭ ಲಕ್ಷ ಅನುದಾನ ನೀಡುತ್ತಿದ್ದು, ಇದೀಗ ನೀಡುವ ಅನುದಾನವು  ೪೦ಲಕ್ಷ ಏರಿಕೆಯಾಗಿದೆ.  ಇದರಿಂದ ಕೊಂಕಣಿ ಭಾಷೆ ಮತ್ತು ಸಾಹಿತ್ಯ, ಸಂಸ್ಕೃತಿ ಜಾನಪದ ಕಲೆಗಳ ಬೆಳವಣಿಗೆಗೆ ಹೆಚ್ಚಿನ  ಪ್ರೋತ್ಸಾಹ ನೀಡಲಾಗಿದೆ.

ಅಕಾಡೆಮಿಯು ಕೊಂಕಣಿಯಲ್ಲಿರುವ  ಪ್ರತಿಯೊಂದು ಪ್ರಕಾರಗಳನ್ನು ಗುರುತಿಸಿ, ವಾರ್ಷಿಕವಾಗಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.  ಕೊಂಕಣಿ ಸಾಹಿತ್ಯ ಸಂಗೀತ, ನಾಟಕ ಜಾನಪದ ಕಾರ್ಯಾಗಾರಗಳು, ಉತ್ಸವಗಳನ್ನು ಏರ್ಪಡಿಸಿ, ಸಾಹಿತ್ಯಕಾರರಿಗೆ, ಸಂಗೀತಗಾರರಿಗೆ ನಾಟಕಕಾರಿಗೆ ಜಾನಪದ ಕಲಾವಿದರುಗಳಿಗೆ ಅವರವರ ಕ್ಷೇತ್ರಗಳಲ್ಲಿ ಪ್ರೋತ್ಸಾಹ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೊಂಕಣಿ ಪುಸ್ತಕಗಳನ್ನು ರಚಿಸುವ ಮತ್ತು ಪ್ರಕಟಿಸುವವರಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ  ಲೇಖಕರಿಂದ ಮತ್ತು ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿಸಲಾಗುತ್ತಿದೆ. ಹಾಗೂ ಕೊಂಕಣಿ ಸಂಗೀತ ಕಲಾವಿದರುಗಳಿಗೆ ಪ್ರೋತ್ಸಾಹಿಸಲು ಅವರು ಪ್ರಕಟಿಸಿರುವ ಸಿ.ಡಿ.ಗಳನ್ನು ಖರೀದಿಸಲಾಗುತ್ತಿದೆ.   ಕೊಂಕಣಿ ಭಾಷೆ, ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹೀಯರುಗಳನ್ನು ಗುರುತಿಸಿ, ಅವರುಗಳೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಎರ್ಪಡಿಸುವುದು, ಅವರನ್ನು ಗೌರವಿಸುವುದು, ಕೊಂಕಣಿ ಭಾಷೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾನ್ಯತೆ ದೊರೆತು ೮ನೇ ಪರಿಶ್ಘೇದದಲ್ಲಿ ಸೇರ್ಪಡೆಯಾದ ದಿನಾಂಕದ ನೆನಪಿಗಾಗಿ ಕೊಂಕಣಿ ಭಾಷಾ ಮಾನ್ಯತಾದಿವಸ ಅಚರಣೆ, ಮಕ್ಕಳಲ್ಲಿ ಕೊಂಕಣಿ ಭಾಷೆಯ ಬಗ್ಗೆ ಅಸಕ್ತಿ ಮೂಡಿಸುವಂತಹ ಸಾಹಿತ್ಯ ಉತ್ಸವ, ಕಲಾಪ್ರತಿಭೋತ್ಸವ, ಹಾಗೂ ವಿವಿಧ ಸ್ಪರ್ಧೆಗಳನ್ನು ನಡೆಸುವುದು.  ಇಂಗ್ಲೀಷ್ ಕೊಂಕಣಿ ಶಬ್ದಕೋಶ, ಕೊಂಕಣಿ ಕಲಿಯೋಣ, ಕೊಂಕಣಿ ಸಮಾಂತರ ಶಬ್ದಕೋಶ ಇವುಗಳನ್ನು ತಯಾರಿಸಿ, ಕೊಂಕಣಿ ಭಾಷೆಯ ಅಭಿವೃದ್ಧಿಗಾಗಿ ಪ್ರಕಟಿಸಲಾಗಿದೆ.  ಅಕಾಡೆಮಿಯ ಕಾರ್ಯಾಚಟುವಟಿಕೆಗಳು ಜನಸಾಮನ್ಯರಿಗೆ ತಲುಪುವಂತೆ  ತ್ರೈಮಾಸಿಕ ಪತ್ರಿಕೆಯನ್ನು ಹೊರತರಲಾಗುತ್ತಿದೆ.  ಕೊಂಕಣಿ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಅಕಾಡೆಮಿ ಮೂಲಕ ಇಡೀ ರಾಜ್ಯದಲ್ಲಿ ನಡೆಸಲಾಗುತ್ತಿದೆ. ಬೆಳಗಾವಿ, ಕಾಸರಗೋಡು ಹಾಗೂ ಇತರೆ ಕಡೆಗಳಲ್ಲಿ  ಗಡಿನಾಡಿನಲ್ಲಿರುವ ಮತ್ತು ಗೋವಾ, ಮುಂಬಾಯಿ ಹೊರರಾಜ್ಯದಲ್ಲಿರುವ ಕೊಂಕಣಿ ಜನರಲ್ಲಿಯೂ ಕೊಂಕಣಿ ಭಾಷಾಭಿಮಾನ ಮೂಡಿಸುವಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.  ಯುವಜನರಲ್ಲಿ ಭಾಷಾಭಿಮಾನ ಮೂಡಿಸುವಲ್ಲಿ ಸಹಕರಿಸುವಂತಹ ಯುವ ಮಹೋತ್ಸವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.   ಹೀಗೆ ಹಲವು ಕಾರ್ಯಾಕ್ರಮಗಳನ್ನು ಹಮ್ಮಿಕೊಂಡು ಅಕಾಡೆಮಿಯ ಮೂಲಕ ಕೊಂಕಣಿ ಭಾಷಾ ಬೆಳವಣಿಗೆಗೆ  ಸರಕಾರವು ಪ್ರೋತ್ಸಾಹ ನೀಡುತ್ತ ಬರುತ್ತಿದೆ.